Tuesday, May 25, 2010

ಮರುಮೌಲ್ಯಮಾಪನ - ನಿಜವಾಗಿ ಯಾರದ್ದು?

ಈ ಲೇಖನವು ಮೇ 9 ರ ಉದಯವಾಣಿಯಲ್ಲಿ ಪ್ರಕಟಗೊಂಡಿದೆ.


"ಹೋಯ್! ನಿಮ್ಮ ಮಗನಿಗೆ ಎಷ್ಟು ಮಾರ್ಕ್ ಬಂತು? ನನ್ನ ಮಗಳಿಗೆ ಸ್ವಲ್ಪ ಕಮ್ಮಿ ಬಂದಿದೆ. ಹಾಗೆ ರಿವಾಲ್ಯ್ವೇಷನ್ ಗೆ ಹಾಕ್ತಾ ಇದ್ದೇನೆ", "ನನ್ನ ಮಗನಿಗೂ ಎಣಿಸಿದಷ್ಟು ಮಾರ್ಕ್ ಬರ್ಲಿಲ್ಲ. ಹಾಗೆ ಡಿ.ಡಿ. ತೆಗೆದುಕೊಂಡು ಹೋಗೋಣ ಅಂತ ಬಂದೆ" ಮೊನ್ನೆ ಬ್ಯಾಂಕಿನಲ್ಲಿದ್ದಾಗ ಈ ಸಂಭಾಷಣೆ ಕಿವಿಗೆ ಬಿತ್ತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಫಲಿತಾಂಶಗಳು ಬಂದ ನಂತರದ ವಿದ್ಯಮಾನ ಇದು. ನೋಡಿದರೆ ಇಂತಹ ಹೆತ್ತವರ ದಂಡೇ ಅಲ್ಲಿ ಸೇರಿತ್ತು. ಕಾಲೇಜಿನಲ್ಲಿ ಅಪ್ಲಿಕೇಶನಿಗೆ ಕ್ಯೂ ನಿಲ್ಲುವ ಬದಲು ಬ್ಯಾಂಕಿನಲ್ಲಿ ಡಿ.ಡಿ. ತೆಗೆದುಕೊಳ್ಳಲು ನಿಂತಿದ್ದರು. ಸೂಕ್ಷ್ಮವಾಗಿ ಅವರ ಮಾತುಕತೆಗಳಿಗೆ ಕಿವಿಗೊಟ್ಟಾಗ ನಾನು ಕಂಡದ್ದು, ತಾವು ನಿರೀಕ್ಷಿಸಿದ ಅಂಕಗಳು ಸಿಗದ ದುಗುಡ ತುಂಬಿದ ಮಕ್ಕಳ ಮುಖಗಳು. ಕೆಲವರಲ್ಲಿ ರೋಷ ಇತ್ತು. ಇನ್ನು ಕೆಲವರಲ್ಲಿ ವ್ಯವಸ್ಥೆಯ ಬಗೆಗೆ ಅಸಹನೆ ಇತ್ತು. ಮತ್ತೆ ಕೆಲವರ ಕಣ್ಣಲ್ಲಿ ಅಳು ತುಂಬಿತ್ತು.

ಇವರೆಲ್ಲಾ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಾರೇನೋ ಹೌದು. ಕೆಲವು ದಿನಗಳಲ್ಲಿ ಫಲಿತಾಂಶವೂ ಬರುತ್ತದೆ. ಅನೇಕರಿಗೆ ಹೆಚ್ಚು ಅಂಕಗಳೂ ಸಿಗಬಹುದು. ಆದರೆ ನನಗೆ ಮೂಡಿದ ಪ್ರಶ್ನೆ ಏನೆಂದರೆ ಇದು ನಿಜವಾಗಿ ಯಾರ ಮೌಲ್ಯಮಾಪನ? ವಿದ್ಯಾರ್ಥಿಗಳದ್ದೇ? ಮೊದಲ ಮೌಲ್ಯಮಾಪಕರದ್ದೇ? ಅಥವಾ ಪರೀಕ್ಷಾ ವ್ಯವಸ್ಥೆಯದ್ದೇ?

ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ತಾವು ಅಂದುಕೊಂಡಷ್ಟೇ ಅಂಕಗಳು ಬರುವುದು ಕಡಮೆ. ಹೆಚ್ಚಿನವರಿಗೆ ಎಣಿಸಿದ್ದಕ್ಕಿಂತ ಕಡಮೆಯೇ ಬಂದಿರುತ್ತದೆ. ಇನ್ನು ಕೆಲವರಿಗೆ ತಮ್ಮ ಅಪೇಕ್ಷೆಗೂ ಮೀರಿ ಅಂಕಗಳು ಸಿಕ್ಕಿರುತ್ತವೆ. ಇಂಥವರು ಮರು ಮೌಲ್ಯಮಾಪನಕ್ಕೆ ಹಾಕುತ್ತಾರೆಯೇ? ಖಂಡಿತಾ ಇಲ್ಲ. ಯಾರು ತಾನೇ ಅಂಕಗಳನ್ನು ಕಡಮೆಗೊಳಿಸಿಕೊಳ್ಳುವುದಕ್ಕೆ ಬಯಸುತ್ತಾರೆ? ಆದರೆ ಆನೇಕ ವಿದ್ಯಾರ್ಥಿಗಳು ತಮಗೆ ನಿಜವಾಗಿ ಬರಬೇಕಾಗಿದ್ದ ಅಂಕಗಳು ಬರದಿದ್ದಾಗ ಸಹಜವಾಗಿ ಮೌಲ್ಯಮಾಪನದ ಕುರಿತು ಸಂಶಯಿಸುತ್ತಾರೆ ಹಾಗೂ ಮರುಮೌಲ್ಯಮಾಪನವನ್ನು ಬಯಸುತ್ತಾರೆ. ಇದಕ್ಕೆ ಬೇಕಾದ ವ್ಯವಸ್ಥೆಯೂ ನಮ್ಮ ಶಿಕ್ಷಣ ಇಲಾಖೆಯಲ್ಲಿದೆ. "ನೂರು ಮಂದಿ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು" ಎನ್ನುವುದೇ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೂಲ ತತ್ವವಲ್ಲವೇ?

ಇತ್ತೀಚಿನ ದಿನಗಳಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದು ಯಾಕೆ ಹೀಗೆ? ಎಷ್ಟೋ ಬಾರಿ ಮರು ಮೌಲ್ಯಮಾಪನ ಮಾಡಿದಾಗ ಅನೇಕ ವಿದ್ಯಾರ್ಥಿಗಳಿಗೆ ತುಂಬಾ ಅಂಕಗಳೂ ಸಿಕ್ಕಿ, ಕೆಲವೊಮ್ಮೆ ಅತ್ಯುನ್ನತ ಶ್ರೇಣಿಗೇರಿದ ಉದಾಹರಣೆಗಳು ಎಷ್ಟೋ ಇವೆ. ಮೊದಲ ಮೌಲ್ಯಮಾಪನದಲ್ಲಿ ತರಗತಿಯಲ್ಲಿ ಹಿಂದಿದ್ದವರು ಶಾಲೆಯಲ್ಲಿ ಮೊದಲಿಗರಾಗುತ್ತಾರೆ. ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಮೊದಲಿಗರಾಗಿದ್ದವರನ್ನು ಬದಿಗೆ ಸರಿಸಿ ಮೊದಲ ಸ್ಥಾನ ಆಕ್ರಮಿಸುತ್ತಾರೆ. ರಾಂಕ್ ಘೋಷಣೆಯಲ್ಲಿ ಏರುಪೇರು ಮಾಡುತ್ತಾರೆ. ಹಾಗಿದ್ದರೆ ಇದರ ಅರ್ಥವೇನು? ಮೊದಲು ತಿದ್ದಿದ ಶಿಕ್ಷಕ ಸರಿಯಾಗಿ ತಿದ್ದಲಿಲ್ಲವೆಂದೇ? ಅಥವಾ ಮರುಮೌಲ್ಯಮಾಪಕ ಉದಾರಿ ಎಂದೇ? ಎರಡೂ ಸಾಧ್ಯತೆಗಳಿವೆ. ತೊಂದರೆ ಏನೆಂದರೆ, ಉತ್ತರ ಪತ್ರಿಕೆಯನ್ನು ಮೊದಲು ತಿದ್ದಿದ ಶಿಕ್ಷಕನಿಗೆ ತಾನು ಯಾಕೆ ಕಡಮೆ ಅಂಕ ಕೊಟ್ಟೆ ಎಂಬುದರ ಕುರಿತು ವಿವರಣೆ ನೀಡಲು ಅವಕಾಶವಿರುವುದಿಲ್ಲ. ಪ್ರತಿಯೊಬ್ಬನ ಯೋಚನಾ ಕ್ರಮಗಳು ಒಂದೊಂದು ರೀತಿ. ಹಾಗಾಗಿ ಒಬ್ಬ ಶಿಕ್ಷಕನಿಗೆ ಇಷ್ಟವಾಗದ ಉತ್ತರದ ವಿಧಾನ ಇನ್ನೊಬ್ಬನಿಗೆ ಇಷ್ಟವಾಗಲೂಬಹುದು. ಹಾಗಾದಾಗ, ಪ್ರತಿಯೊಂದು ಉತ್ತರಕ್ಕೂ ಎರಡನೇ ಶಿಕ್ಷಕ ಅರ್ಧರ್ಧ ಅಂಕಗಳನ್ನು ಹೆಚ್ಚು ಕೊಟ್ಟರೂ ಒಟ್ಟು ಅಂಕಗಳು ಬಹಳ ಹೆಚ್ಚಾಗುತ್ತವೆ.

ವಾಸ್ತವಿಕವಾಗಿ ಮೌಲ್ಯಮಾಪನ ಕ್ರಮದಲ್ಲಿ, ಮರುಮೌಲ್ಯಮಾಪನ ನಡೆದೇ ಇರುತ್ತದೆ. ಯಾಕೆಂದರೆ ಒಬ್ಬ ಶಿಕ್ಷಕ ತಿದ್ದಿದ್ದರಲ್ಲಿ ತಪ್ಪುಗಳಿವೆಯೇ, ಅಂಕಗಳನ್ನು ಕೂಡುವಲ್ಲಿ ಮಾನವ ಸಹಜವಾದ ತಪ್ಪುಗಳಾಗಿವೆಯೇ ಎಂದು ಪುನಃ ಪರೀಕ್ಷಿಸುವುದಕ್ಕಾಗಿಯೇ ಅನುಭವಿ ಶಿಕ್ಷಕರನ್ನು ನೇಮಿಸಿರುತ್ತಾರೆ. ವ್ಯವಸ್ಥೆ ಹೀಗಿದ್ದೂ ಮರುಮೌಲ್ಯಮಾಪನದ ಪಿಡುಗು ಈ ಮಟ್ಟದಲ್ಲಿ ಏರುವುದಕ್ಕೆ ಏನು ಕಾರಣ? ಸಾವಿರಾರು ವಿದ್ಯಾರ್ಥಿಗಳು ಆತಂಕಭರಿತರಾಗಿ ತಿಂಗಳುಗಟ್ಟಲೆ ಸಮರ್ಪಕ ಫಲಿತಾಂಶಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಯಾಕೆ? ಮರುಮೌಲ್ಯಮಾಪನದ ವ್ಯವಸ್ಥೆ ಇರುವುದೇ ಮೌಲ್ಯಮಾಪನದ ನ್ಯೂನತೆಗಳಿಗೆ ಕಾರಣವೇ? ಇವು ಗಮನಿಸಲೇಬೇಕಾದ ಪ್ರಶ್ನೆಗಳು.

ಹೋಗಲಿ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರಾದರೂ ಯಾರು? ಹಣವಿದ್ದವರು ಮಾತ್ರ. ಯಾಕೆಂದರೆ ಬಡ ವಿದ್ಯಾರ್ಥಿಗಳಿಗೆ ಒಂದು ವಿಷಯಕ್ಕೆ ೭೦೦ ರೂಪಾಯಿಗಳಷ್ಟನ್ನು ಕಟ್ಟಿ ಮರುಮೌಲ್ಯಮಾಪನ ಮಾಡಿಸುವುದಕ್ಕೆ ಸಾಧ್ಯವೇ? ಹಾಗಾಗಿ ಅಂತಹ ವಿದ್ಯಾರ್ಥಿಗಳು ಸಿಕ್ಕಿದ ಅಂಕಗಳಲ್ಲೇ ಸಂತೋಷಪಡಬೇಕಾಗುತ್ತದೆ. ಹೀಗಿರುವ ವ್ಯವಸ್ಥೆಯಲ್ಲಿ ಸರಕಾರ ಬಡವರಿಗೆ ಹೇಗೆ ನ್ಯಾಯ ಸಲ್ಲಿಸಿದಂತಾಗುತ್ತದೆ? ಮೊದಲ ಮೌಲ್ಯಮಾಪನವನ್ನೇ ಅಚ್ಚುಕಟ್ಟಾಗಿ ಮಾಡುವಂತೆ ವ್ಯವಸ್ಥೆ ಮಾಡಿದರೆ, ಮರುಮೌಲ್ಯಮಾಪನದ ಅರ್ಜಿಗಳ ಸಂಖ್ಯೆಯನ್ನು ಕಡಮೆಗೊಳಿಸುವುದಕ್ಕೆ ಸಾಧ್ಯವಿಲ್ಲವೇ? ಮರುಮೌಲ್ಯಮಾಪನದ ಅರ್ಜಿಗಳ ಸಂಖ್ಯೆ ಹೆಚ್ಚಿದಷ್ಟೂ ಅದು ಮೌಲ್ಯಮಾಪನದ ಗುಣಮಟ್ಟ ಕಡಮೆ ಆಗುತ್ತಿರುವುದಕ್ಕೆ ಪುರಾವೆ ಆಗುವುದಿಲ್ಲವೇ?

ಅಕ್ಷರ ಸಿ. ದಾಮ್ಲೆ.

3 comments:

  1. You are right akshara... The worst effect of revaluation is seen in engineering exams. Last semester in our college half of the students who failed, were announced as PASS after revaluation.. So what this indicates..? It is similar to getting them Passed by paying money..

    ReplyDelete
  2. ಸರಿಯಾಗಿ ಹೇಳಿದ್ದೀರಿ ಇದು ಒಂದು ಹಣ ಮಾಡೋ ಉದ್ಯಮದಂತೆ ಆಗಿದೆ :( ವಿಪರ್ಯಾಸ ...

    ReplyDelete
  3. ಅಕ್ಷರಶಹ ನಿಜ ಅಕ್ಷರ ದಾಮ್ಲೆಯವರೇ

    ReplyDelete