Wednesday, May 5, 2010

ನಾವು ಯಾರಿಗೂ ಕಾಯಬೇಕಾಗಿಲ್ಲ! ನಾವೇ ಕೈ ಜೋಡಿಸೋಣ

ಈ ಲೇಖನವನ್ನು ಪ್ರಕಟಣೆಗಾಗಿ ವಿಜಯ ಕರ್ನಾಟಕ ಪತ್ರಿಕೆಗೆ ಕಳಿಸಿದ್ದೆ. ಆದರೆ ಪ್ರಕಟವಾಗಲಿಲ್ಲ. ಹಾಗಾಗಿ ಈಗ ನನ್ನದೇ ಪ್ರಕಟಣಾ ಮಾಧ್ಯಮವಾದ ಈ ನನ್ನ ಬ್ಲಾಗ್ ನಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಅನಿಕೆಯನ್ನು ಕಮೆಂಟ್ ಆಗಿ ಬರೆಯಿರಿ.


      ಏಪ್ರಿಲ್ ೨೦ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ರಾಜಶೇಖರ ಗೌಡರ ’ರಾಕೆಟ್ ಮತ್ತೆ ಮೇಲೇರುತ್ತದೆ, ಆದರೆ ನಮ್ಮ ಸ್ವಾಭಿಮಾನ ಮೇಲೇರುವುದು ಯಾವಾಗ?’ ಎಂಬ ಲೇಖನವು ಈ ಬರೆಹಕ್ಕೆ ಇಂಬು ಕೊಟ್ಟಿದೆ. ಹಿರಿಯರು ಹೇಳಿದಂತೆ, ’ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿಗೆ ಅನ್ವರ್ಥವಾಗುವಂತೆ, ನಮಗೆ ನಮ್ಮ ವಿಜ್ಞಾನಿಗಳು ಮಾಡಿದ ಸಾಧನೆಗಳ ಬಗ್ಗೆ ಅಸಡ್ಡೆ ಇರುವುದು ದಿಟವೇ. ಬಹುಷಃ ಇದಕ್ಕೆ ಕಾಅಣ ನಮ್ಮ ತುಲನಾತ್ಮಕ ಮನೋಭಾವ. ಉದಾ: ಭಾರತದಲ್ಲಿ ೩ಜಿ ಗೆ ಬಿಡ್ ಮಾಡುವಾಗ ದೂರದ ಜರ್ಮನಿಯಲ್ಲಿ ೪ಜಿ ಗೆ ಬಿಡ್ ನಡೆಯುತ್ತಿದೆ. ಇದರರ್ಥ ನಮಗಿಂತ ತಂತ್ರಜ್ಞಾನದಲ್ಲಿ ಜರ್ಮನಿ ಮುಂದಿದೆ. ಹಾಗೆಯೇ ಚೀನಾ, ಜಪಾನ್, ಫ್ರಾನ್ಸ್, ಅಮೆರಿಕಾ, ರಷ್ಯಾ ಮುಂತಾದ ದೇಶಗಳೂ ಬಹಳ ಮುಂದೆ ಹೋಗಿವೆ. ರಾಜಶೇಖರರವರೇ ಉಲ್ಲೇಖಿಸಿರುವಂತೆ ಅಲ್ಲದೇ ಹಲವಾರು ಪತ್ರಿಕೆಗಳಲ್ಲಿಯೂ ಪ್ರಕಟವಾಗಿರುವಂತೆ, ೧೯೯೨ರಲ್ಲಿಯೇ ರಷ್ಯಾ ಹಾಗೂ ಅಮೇರಿಕಾಗಳಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನ ಇತ್ತು. ಮೊದಲಿಗೆ ನಾವು ತೊಡಗಿದ್ದು ಆ ತಂತ್ರಜ್ಞಾನವನ್ನು ಕೊಳ್ಳಲು. ಇದು ನಮ್ಮ ಕೊಳ್ಳುಬಾಕ ಸಂಸ್ಕೃತಿಗೆ ದೊಡ್ಡ ಉದಾಹರಣೆ. ಬಹುಷಃ ಅಮೆರಿಕಾ ಈ ಕೊಂಡುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಅಡ್ಡಗಾಲಿಡುವುದಲ್ಲವಾಗಿದ್ದರೆ ನಾವು ಇನ್ನೂ ರಷ್ಯಾದ ತಂತ್ರಜ್ಞಾನವನ್ನು ಬಳಸಿಕೊಂಡು ಅಥವಾ ಅದನ್ನೇ ಸ್ವಲ್ಪ ಅಭಿವೃದ್ಧಿಪಡಿಸಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉಪಗ್ರಹಗಳನ್ನು ನಭಕ್ಕೇರಿಸುತ್ತಿದ್ದೆವೋ ಏನೋ! ಆದರೆ ಈಗ ಇಸ್ರೋದ ವಿಜ್ಞಾನಿಗಳೇ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ಈ ಬಾರಿ ವಿಫಲವಾಗಿರಬಹುದು. ಸೋಲೇ ಗೆಲುವಿನ ಸೋಪಾನವಲ್ಲವೇ? ಹಾಗಾಗಿ ಸೋಲನ್ನು ಸ್ವೀಕರಿಸಿ, ಜೋಪಾನವಾಗಿ ನಾವು ಮುನ್ನಡೆಯಬೇಕು. ಯಶಸ್ಸಿಗಾಗಿ ಸೆಣಸಾಡಬೇಕು.
    ಆದರೆ ನನ್ನನ್ನು ಮತ್ತೆ ಮತ್ತೆ ಕಾಡುವ ಪ್ರಶ್ನೆ, ವಿದೇಶಗಳಲ್ಲಿ ಯಶಸ್ವಿಯಾಗಿದ್ದ ಒಂದು ತಂತ್ರಜ್ಞಾನದ ಅಭಿವೃದ್ಧಿಗೆ ನಾವು ೧೫ ವರ್ಷ ಬೆವರು ಸುರಿಸಬೇಕಾಯ್ತಲ್ಲ?! ಇದಕ್ಕೆ ಕಾರಣವೇನಿರಬಹುದು? ಪ್ರಾಯಶಃ ಐಟಿ ಯುಗದ ಆರಂಭದ ತರುವಾಯ ಕಡೆಗಣಿತವಾಗಿರುವ ಮೂಲವಿಜ್ಞಾನಗಳ ಅಧ್ಯಯನ. ಸಂಶೋಧನೆಗೆ ಮೂಲವಿಜ್ಞಾನದ ಅಧ್ಯಯನವು ಬಹಳ ಪ್ರಧಾನವಾದುದು. ಆದರೆ ಇಂದಿನ ಯುವಜನತೆ ಐಟಿ ಎಂಬ ಕುದುರೆಯ ಬೆನ್ನೇರಿ, ಹಣ ಗಳಿಕೆಯ ಓಟದಲ್ಲಿದ್ದಾರೆ. ಹಣವನ್ನು ಯಾರೂ ಗಳಿಸಬಹುದು. ಕೆಟ್ಟ ದಾರಿಗಳ ವಿಚಾರ ಬಿಡೋಣ. ಕನಿಷ್ಠ ವಿದ್ಯಾಭ್ಯಾಸವನ್ನು ಹೊಂದಿ, ನ್ಯಾಯಯುತವಾಗಿಯೇ ಹಣಗಳಿಸಿ ಕೋಟ್ಯಧಿಪತಿಗಳಾಗಿರುವ ಅನೇಕರ ಉದಾಹರಣೆಗಳು ಇಂದು ನಮ್ಮ ಮುಂದಿವೆ. ಆದರೆ ವೈಜ್ಞಾನಿಕ ಸಂಶೋಧನೆಯೆಂಬುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದು ಕೋಟ್ಯಧಿಪತಿಯಾಗುವುದಕ್ಕಿಂತಲೂ ಮಿಗಿಲಾದುದು. ಕೋಟ್ಯಧಿಪತಿಯ ಹಣ ಮಕ್ಕಳು, ಮರಿಗಳು ತಿಂದು ಮುಗಿಸುತ್ತಾರೆ. ಆದರೆ ವಿಜ್ಞಾನಿಯ ಸಾಧನೆಯ ಫಲ ಇಡೀ ಸಮಾಜಕ್ಕೆ ಸಿಗುತ್ತದೆ.
       ಶ್ರೀಯುತ ರಾಜಶೇಖರರವರು "ಜನರು ವೈಜ್ಞಾನಿಕ ಸಂಶೋಧನೆಗಳ ಕುರಿತು ಭಾವುಕರಾಗಬೇಕು. ಎಷ್ಟೇ ವಿಫಲವಾದರೂ ಇಸ್ರೋದಲ್ಲಿ ನಂಬಿಕೆ ಇಟ್ಟು ಶುಭ ಹಾರೈಸಬೇಕು. ಆಗ ದೇಶದ ಅಭಿವೃದ್ಧಿಗೆ ದುಡಿಯುವ ಇಸ್ರೋದಂತಹ ನೂರಾರು ಸಂಸ್ಥೆಗಳು ಹುಟ್ಟುತ್ತವೆ. ಅಂಥ ಕಾಲ ಯಾವಾಗ ಬರುತ್ತದೋ ಕಾದು ನೋಡಬೇಕು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿಟವೇ. ಇಂಥ ಆಶಾಭಾವ ನಮ್ಮಲ್ಲಿರಬೇಕು. ಆದರೆ ಯಾರೋ ಮಾಡಲಿ ಅಂತ ಹಾರೈಸುತ್ತಾ ಕಾಯುವುದು ಯಾಕೆ? ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಕುರಿತು ಈಗಲೇ ಪ್ರೇರಣೆ ನೀಡಬೇಕು.       
    ವಿದೇಶಿ ಕಂಪೆನಿಗಳ ಆಳುಗಳಾಗಿ, ವಿದೇಶಿಯರಿಂದ ಆಳಿಸಿಕೊಳ್ಳುತ್ತಾ, ಹಗಲೂ-ರಾತ್ರಿ ಆ ಕಂಪೆನಿಗಳ ಅಭಿವೃದ್ಧಿಗೆ ದುಡಿಯುತ್ತಿರುವ ಲಕ್ಷ ಲಕ್ಷ ಸಾಫ್ಟ್ ವೇರ್, ಹಾರ್ಡ್ ವೇರ್ ಎಂಜಿನಿರುಗಳಿದ್ದೀರಲ್ಲಾ? ಇಸ್ರೋದಂತಹ ಸಂಸ್ಥೆಗಾಗಿಯೋ, ಅಥವಾ ದೇಶದ ರಕ್ಷಣಾ ವಿಭಾಗದಲ್ಲಿಯೋ, ಅಥವಾ ಆಡಳಿತ ಸೇವೆಯಲ್ಲಿಯೋ, ಯಾಕೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಾರದು? ಇದು ಇಂಜಿನಿಯರುಗಳಿಗಷ್ಟೇ ಸೀಮಿತವಾಗಬೇಕಾಗಿಲ್ಲ. ವೈದ್ಯರುಗಳಿಗೂ ಅಥವಾ ವಿದೇಶಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಯಾವುದೇ ವೃತ್ತಿಯವರಿಗೂ ಅನ್ವಯವಾಗಬಹುದು. ಉತ್ತಮ ವೈದ್ಯರುಗಳು ಸರಕಾರಿ ಆಸ್ಪತ್ರೆಗಳಲ್ಲಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಸರಕಾರದ ಯೋಜನೆಗಳನ್ನು ಅರ್ಥಪೂರ್ಣವಾಗಿಸಬಹುದು. ಇದಕ್ಕೆ ಬೇಕಾಗಿರುವುದು ನಮ್ಮೆಲ್ಲರ ಮನಃಶಕ್ತಿ. ಇಂದು ತಿಂಗಳಿಗೆ ೫೦ ಸಾವಿರ ಸಂಬಳ ಪಡೆಯುತ್ತಿರುವ ವ್ಯಕ್ತಿ ನಾಳೆ ಹದಿನೈದು, ಇಪ್ಪತ್ತು ಸಾವಿರ ಸಂಬಳಕ್ಕೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕಾಗಬಹುದು. ಇಂದು ಕಾರಿನಲ್ಲಿ ಓಡಾಡಿಕೊಂಡಿರುವವನು ನಾಳೆ ಬೈಕ್ ನಲ್ಲಿ ಹೋಗಬೇಕಾಗಬಹುದು. ಬೈಕಿಗೇ ಸೀಮಿತವಾಗಿರುವವನು ಸಾರ್ವಜನಿಕ ಬಸ್ಸುಗಳಲ್ಲಿ ಪ್ರಯಾಣಿಸಬೇಕಾಗಬಹುದು. ಅಷ್ಟೇ ತಾನೇ?! ದೇಶಕ್ಕಾಗಿ ನಾವು ಇಷ್ಟೂ ತ್ಯಾಗ ಮಾಡಲು ಸಿದ್ಧರಿಲ್ಲವೇ?! ಇದರಿಂದ ಬೆಂಗಳೂರಿನಂತಹ ನಗರಗಳಲ್ಲಿ ಕಂಡುಬರುವ ಗಂಟೆಗಟ್ಟಲೆ ಕಾಯಿಸುವ ಟ್ರಾಫಿಕ್ ಜಾಮ್ ಗಳೂ ಕಡಮೆಯಾಗಬಹುದು. ಪರಿಸರದ ಮೇಲೆ ನಾವು ಮಾಡುತ್ತಿರುವ ಹಾನಿಯ ಪ್ರಮಾಣ ಬಹುವಾಗಿ ಕಡಮೆಯಾಗುತ್ತದೆ. ನಾವು ಹಣದ ಲಾಲಸೆಯಿಂದ, ದುಂದುವೆಚ್ಚದ ಸೋಗಿನಿಂದ ಹೊರಬರುವುದಕ್ಕೆ ಸಿದ್ಧರಾಗಬೇಕು ಅಷ್ಟೆ. ಆಗ ಇಸ್ರೋದಂತಹ ನೂರಾರು ಸಂಸ್ಥೆಗಳು ಭಾರತದ ಅಭಿವೃದ್ಧಿಗೆ ದುಡಿಯುವ ಕನಸು ನನಸಾಗುವುದಕ್ಕೆ ಬಹಳ ವರ್ಷ ಕಾಯಬೇಕಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವರ್ತರಾಗೋಣ.

6 comments:

  1. ಲೇಖನದ ಅಭಿಪ್ರಾಯಕ್ಕೆ ನನ್ನ ಸಮ್ಮತಿ ಇದೆ. ಪ್ರೊ.ಸಿ.ಎನ್.ಆರ್.ರಾವ್ ಕೂಡ ಶುದ್ಧ ವಿಜ್ಞಾನಕ್ಕೆ ಒತ್ತು ನೀಡಿ ಆಗಾಗ ವ್ಯಕ್ತಪಡಿಸುತ್ತಿರುವ ಅಭಿಪ್ರಾಯ ಇಲ್ಲಿ ಗಮನಾರ್ಹ. ಐಟಿ ಕ್ಷೇತ್ರದಲ್ಲಾದರೂ ನಾವು ವಿದೇಶಗಳ ಕೂಲಿ ಕೆಲಸ ಕಡಿಮೆಮಾಡಿ ಸ್ವಂತ ಸಾಧನೆ ಮೆರೆಯಬಹುದಿತ್ತು.

    ReplyDelete
  2. yes.. like this one....
    But need guidance from elders...

    ReplyDelete
  3. ಪ್ರಿಯ ಅಕ್ಷರ
    ಕೊಳ್ಳುಬಾಕ ಸಂಸ್ಕೃತಿಯ ಅತಿರೇಕದಲ್ಲಿ ನಾವು ಸುಖವನ್ನು ಕೊಳ್ಳುವ ತಪ್ಪು ಕಲ್ಪನೆಯಲ್ಲಿ ದುಡಿಯುವ ಸಂತೋಷ, ಸವಾಲನ್ನು ಎದುರಿಸುವ ಛಲವನ್ನು ಕಳೆದುಕೊಂಡಿದ್ದೇವೆ. ಚಕ್ರದುರುಳಿನ ಉತ್ತಮ ಅಂಶ ಬೇಗ ಮೇಲೆ ಬರುತ್ತದೆ ಎಂದು ಆಶಿಸೋಣ. ಎಚ್ಚರಿಕೆಯ ಗಂಟೆ ಬಾರಿಸಿದ್ದಕ್ಕೆ ಅಭಿನಂದನೆಗಳು.
    ಅಶೋಕವರ್ಧನ

    ReplyDelete
  4. Life Science is very important. IT has been a major enabler. Today you and I are blogging are views to the world. Who do you thank ?

    Life science or a IT Geek sitting in Mountain View, CA in Google office. Who probably owns a Ferrari ?

    Life Science is important. IT is not less important in today's world. If IT can make one a millionaire so be it whats wrong in it ?

    Making my point.

    ReplyDelete