Thursday, February 5, 2015

ಸಾಮಾಜಿಕ ಸ್ತರಗಳು ಮತ್ತು ಆಕಾಂಕ್ಷೆಗಳು - ಭರವಸೆಗಳು ಮತ್ತು ಯೋಜನೆಗಳು

ಯಾವುದೇ ಸಮಾಜದಲ್ಲಿಯಾದರೂ ಶ್ರೇಣಿವ್ಯವಸ್ಥೆ ಅನ್ನುವುದು ಇದ್ದೇ ಇರುತ್ತದೆ. ಶ್ರೇಣೀಕೃತ ವಿಂಗಡಣೆಯ ಆಧಾರಗಳು ಬೇರೆ ಬೇರೆ ಇರಬಹುದು. ಆದರೆ ಇಂದಿನ ಆಧುನಿಕ ಯುಗದಲ್ಲಿ ಸುಲಭವಾಗಿ ಗುರುತಿಸಲು ಸಿಗುವುದು ಆರ್ಥಿಕ ಸ್ಥಿತಿಯಾಧಾರಿತ ವರ್ಗ ವಿಂಗಡಣೆ (class division). ವಿವಿಧ ವರ್ಗಗಳ ಜನರ ಬೇಡಿಕೆಗಳ ಮಧ್ಯೆ ಬಹಳ ವ್ಯತ್ಯಾಸಗಳಿವೆ. ಕೆಳವರ್ಗದ ಜನರು ಇನ್ನೂ ಕೂಡಾ ಅಪೇಕ್ಷಿಸುವುದೇನೆಂದರೆ ಅನ್ನ, ನೀರು ಮತ್ತು ವಿದ್ಯುತ್.ಅವರಿಗೆ ಅದರಿಂದಾಚೆಗಿನ ಕುರಿತು ಯೋಚನೆಯೇ ಇಲ್ಲ. ಇದರ ಅರ್ಥ ಜನರಿನ್ನೂ ಚಿಂತಿಸುವ ರೀತಿಯನ್ನು ಬದಲಿಸಲಿಲ್ಲವೆಂದಲ್ಲ. ಬಡವರಿಗಾಗಿ ನಾವಿನ್ನೂ ಮಾಡಬೇಕಾದದ್ದೇಷ್ಟಿದೆ ಎಂಬುದರ ಸಂಕೇತ. ಇನ್ನೂ ಕೂಡಾ ಭಾರತದಲ್ಲಿ ಹಸಿವಿನಿಂದ ಒಪ್ಪೊತ್ತಿನ ಊಟಕ್ಕೆ ಗತಿ ಇಲ್ಲದೆ ಪ್ರಾಣ ಬಿಡುವ ಮಂದಿ ಅನೇಕರಿದ್ದಾರೆ. ಇನ್ನೂ ಮೂಲಭೂತ ಸೌಕರ್ಯಗಳ ಪೂರೈಕೆಯ ಕೊರತೆ ಇದೆ. ಹಸಿವನ್ನು ನೀಗಿಸದ ಹೊರತು ವ್ಯಕ್ತಿ ಇನ್ನೇನನ್ನು ಯೋಚಿಸಬಲ್ಲ!? 

ಆದರೆ ಮಧ್ಯಮ ವರ್ಗದವರು ಬಯಸುವುದು ಉತ್ತಮ ಶಿಕ್ಷಣ, ಉದ್ಯೋಗ, ಆರೋಗ್ಯ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸುರಕ್ಷತೆ ಮುಂತಾದುವುಗಳನ್ನು. ವಿದೇಶೀ ನೀತಿ, ರಾಜಕೀಯ ನೀತಿ ಮತ್ತು ಆರ್ಥಿಕ ನೀತಿಗಳನ್ನು ಇವರು ಗಮನಿಸುತ್ತಾರಾದರೂ ಅವರ ಆಕಾಂಕ್ಷೆಗಳು ತಮ್ಮ ಜೀವನದ ಸಾಧ್ಯತೆಗಳನ್ನು (life chances) ಹೆಚ್ಚಿಸಿಕೊಂಡು ಮೇಲ್ಮಧ್ಯಮ ವರ್ಗಕ್ಕೆ ಸೇರುವುದು ಅಥವಾ ಮೇಲ್ವರ್ಗಕ್ಕೆ ಸೇರುವುದೇ ಆಗಿರುತ್ತದೆ. 

ಮೇಲ್ವರ್ಗದವರಿಗೆ ತಮ್ಮ ಸ್ಥಿತಿಯನ್ನು ರಕ್ಷಿಸಿಕೊಳ್ಳುವ ಅಭಿಲಾಷೆ. ಆರ್ಥಿಕವಾಗಿ ಇನ್ನಷ್ಟು ಬಲಗೊಂಡು ಸುಖಜೀವನ ನಡೆಸುವ ಹಂಬಲ. ತಮ್ಮ ಕೆಲಸಗಳನ್ನು ಭ್ರಷ್ಟಾಚಾರದ ಮೂಲಕವಾದರೂ ಸರಿಯೇ, ಬೇಗನೇ ಮಾಡಿಕೊಳ್ಳಬೇಕೆಂಬ ಆತುರ. 

ಈ ರೀತಿಯ ವೈಪರೀತ್ಯಗಳಿರುವಾಗ ಭರವಸೆಗಳನ್ನು ಕೊಡುವುದು ಸುಲಭ, ಆದರೆ ಕಾಯಿದೆಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಯಾಕೆಂದರೆ ನಮ್ಮಲ್ಲಿ ಆರ್ಥಿಕ ವ್ಯವಸ್ಥೆಗೆ ಆಧಾರ ನೀಡುವ ಮೂಲಸೌಕರ್ಯದ (infrastructure) ಕೊರತೆ ಇದೆ. ಒಂದು ವರ್ಗದ ಜನರ ಆಶಯಗಳನ್ನು ಪೂರೈಸ ಹೊರಟರ ಅದು ಎಷ್ಟೋ ಬಾರಿ ಇನ್ನೊಂದು ವರ್ಗದ ಜನರ ಆಶಯಗಳಿಗೆ ಮಾರಕವಾಗುತ್ತದೆ. ಹಾಗಾಗಿ ರಾಜಕೀಯ ಪಕ್ಷಗಳು ನೈಜತೆಯನ್ನು ಅರ್ಥವಿಸಿಕೊಂಡು, ಅದರ ಆಧಾರದ ಮೇಲೆ ನಿಜವಾಗಿಯೂ ಸಾಧ್ಯವಿರುವಷ್ಟೇ ಕೆಲಸ ಮಾಡುತ್ತೇವೆ ಎನ್ನುವ ನಿಜ ಭರವಸೆಗಳನ್ನು ಕೊಡಬೇಕು. ಜನರೂ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ ಪ್ರೌಢತೆ ತೋರಿಸಬೇಕು. ಮತ್ತು ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ತಮ್ಮದ್ದಾದ ಕೊಡುಗೆಯನ್ನು ಕೊಡಬೇಕು. ಸಾಮಾಜಿಕವಾಗಿ ಹೊರಗಿಡಲ್ಪಟ್ಟವರ ಮತ್ತು ಹೊರಗಿಟ್ಟುಕೊಂಡವರ ನಡುವಿನ ಅಂತರವನ್ನು ಕಡಮೆ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಆದರೆ ಸರಕಾರಗಳು ಈ ನಿಟ್ಟಿನಲ್ಲಿ ಖಂಡಿತವಾಗಿಯೂ ಕೆಲಸ ಮಾಡಬೇಕು. ಕೇವಲ ಭರವಸೆಗಳಷ್ಟೇ ಅಲ್ಲ, ಅವುಗಳನ್ನು ಪೂರೈಸಲು ಬೇಕಾದ ಸಮಷ್ಟಿ ದೃಷ್ಟಿಕೋನದ ಯೋಜನೆಗಳಿರಬೇಕು. ಮತ್ತು ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸುವಲ್ಲಿ ಎಲ್ಲರೂ ಒಮ್ಮತದಿಂದ ಕೆಲಸಮಾಡಬೇಕು. ಅದನ್ನು ಸಾಕಾರಗೊಳಿಸುವ ಕಡೆಗೆ ವಿವಿಧ ಸ್ತರಗಳ ಜನರು ಜೊತೆಯಲ್ಲಿ ಸಾಗಿದರೆ ದೇಶದ ಅಭಿವೃದ್ಧಿ ಸಾಧ್ಯ. 


ಈ ಲೇಖನವು ಕನ್ನಡ ಫೋರಮ್ (http://www.kannadaforum.net/)  ಎಂಬ ಜಾಲತಾಣವೊಂದರಲ್ಲಿ ಪ್ರಕಟವಾಗಿದೆ. 

No comments:

Post a Comment